ಹೊನ್ನಾವರ : ರಾಜ್ಯವನ್ನು ಅಳುತ್ತಿರುವ ಕಾಂಗ್ರೆಸ್ ಸರಕಾರ ಪ್ರತಿನಿತ್ಯ ದಿನಬಳಕೆಯ ವಸ್ತುವಿನ ಮೇಲೆ ಬೆಲೆಯನ್ನು ಏರಿಕೆ ಮಾಡುತ್ತಿದೆ. ಕಳೆದ ಎರಡು ವರ್ಷದಿಂದ ಆಡಳಿತ ಮಾಡುತ್ತಿರುವ ಸರಕಾರಕ್ಕೆ ಯಾವುದೇ ಯೋಚನೆಗಳಿಲ್ಲ, ಯೋಜನೆಗಳಿಲ್ಲ ಕೇವಲ ಬೆಲೆ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದೆ ಎಂದು ಮಂಡಲಾಧ್ಯಕ್ಷ ಮಂಜುನಾಥ ನಾಯ್ಕ ಹೇಳಿದರು.
ಅವರು ಪಟ್ಟಣದ ಶರಾವತಿ ಸರ್ಕಲ್ನಲ್ಲಿ ರಾಜ್ಯ ಸರಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಕಚ್ಚಾ ತೈಲದ ಬೆಲೆ ಏರಿಕೆ ಆದ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಏರಿಕೆ ಮಾಡಲಾಗಿದೆ. ಇಲ್ಲಿ ಅಂತಹ ಯಾವುದೇ ಕಾರಣಗಳಿಲ್ಲದೆ ಬೆಲೆ ಏರಿಕೆ ಮಾಡಲಾಗುತ್ತಿದೆ. ಅದಕ್ಕೆ ಇದಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ ಎಂದರು.
ಮಾಜಿ ಜಿ. ಪಂ. ಸದಸ್ಯ ಶಿವಾನಂದ ಹೆಗಡೆ ಕಡತೋಕ ಮಾತನಾಡಿ ಕಾಂಗ್ರೆಸ್ ಸರಕಾರ ಅನಾವಶ್ಯಕವಾಗಿ ಬೆಲೆ ಏರಿಕೆ ಮಾಡುತ್ತಿದೆ. ಯಾವುದೇ ಕಾರಣ, ಸಕಾರಣ ಇಲ್ಲದೆ ಬೆಲೆ ಏರಿಕೆ ಮಾಡುತ್ತಿದೆ. ಮುದ್ರಾಂಕ ಶುಲ್ಕದಲ್ಲಿ ಹೆಚ್ಚಳವಾಗಿದೆ. ರೈತರಿಗೆ ರೆಕಾರ್ಡ್ ತೆಗೆದುಕೊಳ್ಳಲು ಸಮಸ್ಯೆ ಆಗಿದೆ. ಪ್ರತಿಯೊಂದು ಹಂತದಲ್ಲೂ ಸಮಸ್ಯೆ ಆಗಿದೆ. ಯಾವುದೇ ಇಲಾಖೆಯ ಕಚೇರಿಗೆ ಹೋದರೆ ಜನ ಸಾಮಾನ್ಯರ ಕೆಲಸ ಆಗುತ್ತಿಲ್ಲ. ಆಡಳಿತ ವ್ಯವಸ್ಥೆ ದಿಕ್ಕು ತಪ್ಪಿದೆ. ವ್ಯವಸ್ಥೆ ಹದಗೆಟ್ಟು ಹೋಗಿದೆ, ಈ ಸರಕಾರ ಆದಷ್ಟು ಬೇಗ ತೊಲಗಬೇಕು ಎಂದರು.
ಮುಖಂಡ ಎಂ. ಜಿ. ಭಟ್ಟ ಕೂಜಳ್ಳಿ ಮಾತನಾಡಿ ಜನರನ್ನು ಮೂರ್ಖರನ್ನಾಗಿ ಮಾಡುವ ಒಂದು ಪ್ರಯೋಗ, ಅವರಿಗೆ ಗೊತ್ತು ಜನರನ್ನು ಮೂರ್ಖರನ್ನಾಗಿ ಮಾಡಬಹುದು ಅಂತ, ಅದು ಬಿಟ್ಟು ರಾಜ್ಯ ದಿವಾಳಿ ಆಗುತ್ತಿರಬೇಕಾದರೆ ಪ್ರತಿಯೊಂದು ಬೆಲೆಯನ್ನು ಏರಿಸಿ, ವಿದ್ಯುತ್ 4 ರೂ ಇರುವುದನ್ನು 7.75 ಏರಿಕೆ ಮಾಡಿದ್ದಾರೆ. ಎರಡು ತಿಂಗಳ ಡಿಪಾಸಿಟ್ ತೆಗೆದುಕೊಳ್ಳುತ್ತಿದ್ದಾರೆ. ಹಗಲು ದರೋಡೆ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆ ಎಂಬ ಆಮಿಷ ಕೊಟ್ಟು ಅದರ ಹತ್ತು ಪಟ್ಟು ಜನರಿಗೆ ಮೋಸ ಮಾಡುತ್ತಿದ್ದಾರೆ, ದೌರ್ಜನ್ಯ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ವಿವಿಧ ಸೆಲ್ ನ ಮುಖಂಡರು ಪ್ರತಿಭಟನೆ ಉದ್ದೇಸಿಸಿ ಮಾತನಾಡಿದರು. ಪಟ್ಟಣ ಪಂಚಾಯತ ಅಧ್ಯಕ್ಷ ನಾಗರಾಜ ಭಟ್, ಉಪಾಧ್ಯಕ್ಷ ಸುರೇಶ ಹೊನ್ನಾವರ, ಸದಸ್ಯರಾದ ಶಿವರಾಜ ಮೇಸ್ತ, ಮೇಧಾ ನಾಯ್ಕ, ಸುಜಾತ ಮೇಸ್ತ, ಸುಭಾಷ ಹರಿಜನ, ಬಿಜೆಪಿ ಮುಖಂಡರಾದ ರಾಜೇಶ ಭಂಡಾರಿ ,ವಿನೋದ ನಾಯ್ಕ ರಾಯಲಕೇರಿ, ದೀಪಕ ನಾಯ್ಕ ಮಂಕಿ, ರಾಘು ಖಾರ್ವಿ, ಗೋವಿಂದ ಗೌಡ, ಗಣಪತಿ ಗೌಡ ಚಿತ್ತಾರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.